ಯಾಕ್ ಧಾಳಿ

2011ರ ಜೂನ್ ನಲ್ಲಿ ನಾವೆಲ್ಲ ರೂಪಿನ್ ಪಾಸ್ ಎಂಬ ಹಿಮಾಲಯನ್ ಟ್ರೆಕ್ ಗೆ ಹೋದಾಗ ನಡೆದ  ಘಟನೆ... ಉತ್ತರಾಖಂಡದ ದೌಲಾದಿಂದ 5 ದಿನ ಸತತವಾಗಿ ಹಿಮಾಲಯದ ಪರ್ವತಗಳನ್ನು ಹತ್ತಿ ಬಹಳ ಕಷ್ಟದಲ್ಲಿ ರೂಪಿನ್ ಪಾಸ್ (15,250 feet altitude) ಅನ್ನು ದಾಟಿ ಹಿಮಾಚಲ ಪ್ರದೇಶದ ರೌಂತಿಗಢ್ ದಿಕ್ಕಿನಲ್ಲಿ ಸಾಗಿದೆವು. ರೂಪಿನ್ ಪಾಸ್-ನ ಕೊನೆಯ ಏರನ್ನು ಏರಿದ ಕ್ಷಣಗಳು ಮಾತ್ರ ಬಹಳ ಭಯಾನಕವಾಗಿದ್ದವು. ಸ್ವಲ್ಪ ಎಡವಿದರೂ ಕಾಲು ಜಾರಿ ನೀವು ಎಂದೂ ಯಾರೂ ಹುಡುಕಲಾಗದ ಕಂದಕಕ್ಕೆ ಜಾರಿ ಬೀಳುತ್ತೀರಿ. ಅಲ್ಲಿಗೆ ನಿಮ್ಮ ಕಥೆ ಮುಕ್ತಾಯವಾದಂತೆ !!!

ಯಾವ ಚಾರಣವಾದರೂ ಸರಿ, ಒಮ್ಮೆ ಪರ್ವತದ ಏರನ್ನು ಮುಟ್ಟಿ ತಿರುಗಿ ಇಳಿಯುವಾಗ, ಅಂತೂ ಕಷ್ಟದ ಚಾರಣ ಮುಗಿಯಿತೆಂದು ನೀವು ಅತಿ ನಿರಾಳರಾಗಿರುತ್ತೀರಿ.  ನಿಮ್ಮ ಕಾಲುಗಳು ಬಳಲಿ ಸೋತು ಶಕ್ತಿಹೀನವಾಗಿ ಜೋಲುತ್ತಿರುತ್ತವೆ. ಅಂತೂ ಇಂತೂ ಕೆಳಗೆ ಮುಟ್ಟಿ ನಿಮ್ಮ ವಾಹನವನ್ನೋ ಇಲ್ಲ ಮುಂದಿನ ಕ್ಯಾಂಪ್ ಅನ್ನೋ ಮುಟ್ಟಿದರೆ ಸಾಕು ಎಂಬ ತುಡಿತ ಮನದಲ್ಲಿ ತುಂಬಿರುತ್ತದೆ. ಹಾಗೆಯೇ ನಮ್ಮ ಗುಂಪಿನ ಕೃಷ್ಣ, ಮಿಥುನ್, ಸಂದೀಪ್ (ಚಿಕ್ ಹುಡುಗ), ಅರುಣ್, ರಸೂಲ್ ಹಾಗೂ ಇತರ ಚಾರಣಿಗರು ಎಲ್ಲರೂ ನಮ್ಮ ನಮ್ಮ ಪಾಡಿಗೆ ಏನೇನೋ ಹರಟುತ್ತಾ ರೂಪಿನ್ ಪಾಸಿನ ಪರ್ವತದ ಇಳಿಜಾರಿನಲ್ಲಿ ಇಳಿಯುತ್ತಿದ್ದೆವು. ಹಿಮ ಕರಗಿದ ಪರ್ವತಗಳ ಮೈಮೇಲೆ ತೆಳ್ಳನೆಯ ಹಸಿರು ಹುಲ್ಲಿನ ಹೊದಿಕೆ ಸುತ್ತಿಕೊಂಡಿದ್ದರಿಂದ ಬಹುದೂರದವರೆಗಿನ ದೃಶ್ಯಗಳು ಗೋಚರಿಸುತ್ತಿದ್ದವು.

ಹಿಮಾಲಯದ ಹುಲ್ಲಿನಿಂದಾವೃತವಾದ ಬೆಟ್ಟಗಳಲ್ಲಿ ಯಾಕ್ ಮೃಗಗಳು ಗೋಚರಿಸುವದು ಸಾಮಾನ್ಯ. ಆದ್ದರಿಂದ ದೂರದಲ್ಲಿ ನಮ್ಮೆಡೆಗೇ ನೋಡುತ್ತಾ ನಿಂತಿದ್ದ 2 ಬೃಹತ್ ಯಾಕ್ ಮೃಗಗಳನ್ನು ನೋಡಿದರೂ ನಮಗೆ ಅದು ಅಂಥಹಾ ವಿಶೇಷವೆಂದೆನಿಸಲಿಲ್ಲ. ಹಾಗೇ ನಮ್ಮ ಸಹಚಾರಣಿಗರಿಂದ ಸ್ವಲ್ಪ ದೂರದಲ್ಲಿ ನಡೆಯುತ್ತಿದ್ದ ನಮಗೆ "ಹೇ ..ಹೇ... ಓಡ್ರೋ...  ಓಡ್ರೋ... ಯಾಕ್ ನಮ್ಮ್ ಕಡೇನೇ ಓಡಿ ಬರ್ತಾ ಇದೆ ಕಣ್ರೋ...!!!" ಎಂದು ಕೂಗುತ್ತಾ ನಮ್ಮೆಡೆಗೆ ಓಡಿ ಬರುತ್ತಿರುವ ಗೆಳೆಯರು ಕಂಡರು... ಅವರ ಹಿಂದೆ ಬೆನ್ನಟ್ಟಿ ಬರುತ್ತಿದ್ದ ಯಾಕ್ ಗಳನ್ನ ನೋಡಿ ನಾವೂ ಕಿತ್ತಾಬಿದ್ದು ಇರುವ ಒಂದೇ ಕಾಲುದಾರಿಯಲ್ಲಿ ಓಡಿದೆವು... ಆದರೆ ಎಲ್ಲೆಂದು ಓಡುವದು? ಒಂದೆಡೆ ಕಡಿದಾದ ಪ್ರಪಾತ. ಇನ್ನೊಂದೆಡೆ ನಮ್ಮಿಂದ ಹತ್ತಲಾಗದ ಬೆಟ್ಟ.!!!

ಪುಣ್ಯಕ್ಕೆ ಸ್ವಲ್ಪದರಲ್ಲೇ ಕುರಿಕಾಯುವ ಕುರುಬರು ಛಳಿಗಾಲಕ್ಕೆಂದು ಮಾಡಿಕೊಂಡಿದ್ದ ಕಲ್ಲಿನ ಮನೆಯೊಂದು ಸಿಕ್ಕಿತು. ನಾನು ಅದರಲ್ಲಿ ಹೊಕ್ಕುತ್ತಿದ್ದಂತೆಯೇ ಅಟ್ಟಿಬರುತ್ತಿದ್ದ ಒಂದು ಬೃಹತ್ ಯಾಕ್ ಓಡಿ ಬರುತ್ತಿದ್ದ ಕೃಷ್ಣನಿಂದ ಒಂದೇ ಮೀಟರ್ ದೂರದಲ್ಲಿ ಇತ್ತು !!!! ಕೂಡಲೇ ಕೈಗೆ ಸಿಕ್ಕಿದ ಒಂದು ದೊಡ್ಡ ಕಲ್ಲನ್ನು ಆ ಯಾಕ್ ಕಡೆಗೆ ಎಸೆದೆ. ಏನಾಯಿತೋ ಏನೊ, ಹತ್ತಾರು ಮನುಷ್ಯರನ್ನು ಅಟ್ಟಿಕೊಂಡು ಬರುತ್ತಿದ್ದ ಎರಡೂ ಯಾಕ್ ಗಳು ನಾವು ಮುಂದೆ ಹೋಗಬೇಕಾಗಿದ್ದ  ದಾರಿಯಲ್ಲಿ ಓಡಿದವು. 

ಮರುಜೀವ ಸಿಕ್ಕಂತಾದ ನಾವೆಲ್ಲ ಸ್ವಲ್ಪ ಸಮಯ ನಾವೆಲ್ಲ ಸುಧಾರಿಸಿಕೊಂಡು ಯಾಕ್ ಗಳು ಎಲ್ಲಿ ಹೋದವೆಂದು ನೋಡಲು ಸ್ವಲ್ಪ ಮುಂದೆ ಹೋದೆವು. ಆದರೆ ದಿಬ್ಬದ ಆಚೆ ನಿಂತಿದ್ದ ಅವುಗಳು ಮತ್ತೆ ವಿರುದ್ಧ ದಿಕ್ಕಿನಲ್ಲಿ ನಮ್ಮೆಡೆಗೆ ಓಡಿಬರಲಾರಂಭಿಸಿದವು !!! ನಾವೆಲ್ಲಾ ಕೈನಲ್ಲಿ ಕಲ್ಲುಗಳು, ನಮ್ಮ ಚಾರಣದ ಕೋಲುಗಳನ್ನ ಎತ್ತಿತೋರಿಸುತ್ತಾ  ಪುರಾತನಕಾಲದ ಸೈನಿಕರಂತೆ "ಹೋಯ್ ಹೋಯ್ ಹೋಯ್ ಹೋಯ್" ಎಂದು ಭಯ-ರುದ್ರಾವೇಷದಲ್ಲಿ  ಕಿರುಚತೊಡಗಿದೆವು...!!! ಆದರೂ ಆ ಯಾಕ್ ಗಳು ಏನೂ ಹೆದರದೆ ನಮ್ಮನ್ನೇ ದಿಟ್ಟಿಸಿ ನೋಡುತ್ತಾ ನಿಂತಿದ್ದವು...

ಪರಿಸ್ಥಿತಿ ಹಾಗೇ ಇದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ!. ನಮ್ಮ ಕಿರುಚಾಟವನ್ನು ಕೇಳಿದ ನಮ್ಮ ಗೈಡ್ ದೂರದಿಂದ ತಿರುಗಿ ಓಡಿಬಂದು ಎರಡೂ ಯಾಕ್ ಗಳನ್ನು ಬೆಟ್ಟದ ಮೇಲೆಡೆಗೆ ಓಡಿಸಿದ..

ನಮ್ಮ ಗೈಡ್ ಹೇಳಿದ್ದು, "ಇಲ್ಲಿ ಹಳ್ಳಿಯವರು ಯಾಕ್ ಗಳಿಗೆ ತಿನ್ನಲು ಉಪ್ಪನ್ನು ಕೊಡುತ್ತಾರೆ. ಉಪ್ಪು ಎಂದರೆ ಅವಕ್ಕೆ ಎಲ್ಲಿಲ್ಲದ ಪ್ರೀತಿ. ಆದ್ದರಿಂದ ಅವು ನಿಮ್ಮೆಡೆಗೆ ಓಡಿಬಂದಿರಬೇಕು" ಎಂದು. ಅವರು ಕೊಟ್ಟ ಕಾರಣ ಸಮಂಜಸವಾದರೂ ಒಪ್ಪಿಕೊಳ್ಳುವದು ಅಸಾಧ್ಯವಾಗಿತ್ತು. ಆ ದಿನ ಯಾಕ್ ಗಳು ನಮ್ಮನ್ನು ಅರ್ಥಾತ್ ಅಟ್ಟಿಸಿಕೊಂಡೇ ಬಂದಿದ್ದವು ಎಂಬುದು ನಮ್ಮ ಅನಿಸಿಕೆ. ಯಾಕೆಂದು ಗೊತ್ತಿಲ್ಲ.

ಕಡಿದಾದ ಇಳಿಜಾರು ಪರ್ವತಗಳ ಕಾಲುಹಾದಿಯಲ್ಲಿ, ಬೇಡವಾಗಿದ್ದ ಯಾಕ್ ನ ನಿರೀಕ್ಷೆಯಲ್ಲಿ ಮತ್ತೆ ಮತ್ತೆ ಹಿಂತಿರುಗಿ ಭಯದಿಂದ ನೋಡುತ್ತಾ ನಮ್ಮ ಮುಂದಿನ ಕ್ಯಾಂಪ್ ಕಡೆಗೆ ತೆರಳಿದೆವು.... ಇಂದಿಗೂ ಆ ಘಟನೆಯನ್ನು ನೆನೆಸಿಕೊಂಡರೆ ಕೈಯಲ್ಲಿ ಆಯುಧಗಳಿಲ್ಲದ ಮನುಷ್ಯ ಎಷ್ಟು ನಿಸ್ಸಹಾಯಕ ಎಂಬುದು ಅರಿವಾಗುತ್ತದೆ... 
       

ಯೋಗಾಚಾರ್ಯ ಬಿ ಕೆ ಎಸ್ ಅಯ್ಯಂಗಾರ್

ಯೋಗಾಚಾರ್ಯ ಬಿ ಕೆ ಎಸ್ ಅಯ್ಯಂಗಾರ್ ... ಇವರ ಬಗ್ಗೆ ನಾನೇನೂ ಹೊಸದಾಗಿ ಪರಿಚಯ ಮಾಡಿಕೊಡಬೇಕಾಗಿಲ್ಲ... ಕೆಲದಿನಗಳ ಹಿಂದೆ ಪುಣೆ ನಗರಿಗೆ ಹೊಸ ಕೆಲಸಕ್ಕೆ ಸೇರಿದ ನಂತರ ಪುಣೆಯಲ್ಲಿರುವ “ರಮಾಮಣಿ ಯೋಗ ಕೇಂದ್ರ”ಕ್ಕೆ ಯೋಗ ಕಲಿಯಲು ಸೇರಿಕೊಂಡೆ.

ಇದರ ಸ್ಥಾಪಕರು ಸುಪ್ರಸಿದ್ಧ ಯೋಗಾಚಾರ್ಯ ಬಿ ಕೆ ಎಸ್ ಅಯ್ಯಂಗಾರ್ ಅವರು. ಅವರು ಎಲ್ಲರ ಮಾತಿನಲ್ಲಿ ಪ್ರೀತಿಯ ಗುರೂಜಿ ಎನಿಸಿಕೊಳ್ಳುತ್ತಾರೆ. ಎಲ್ಲ ಯೋಗಾರ್ಥಿಗಳಿಗೆ ಕಣ್ಣೆದುರಿಗಿನ ದೇವರೇ ಅವರು. ಕಣ್ಣೆದುರಿಗೆ ಬಂದು ನಿಂತರೆ ಸಿಂಹವೇ ನಿಮ್ಮ ಎದುರಿಗೆ ನಿಂತು ಘರ್ಜಿಸುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ!!!. ಅಂಥಹ ಅಜಾನುಬಾಹು ಶಾರೀರ ಹಾಗೂ ವ್ಯಕ್ತಿತ್ವ ಅವರದು. ವಯಸ್ಸು 93 ಆದರೂ ಪ್ರತೀದಿನ 3-4 ಗಂಟೆಗಳ ಕಾಲ ಯೋಗಭ್ಯಾಸ ನಡೆಸಿಯೇ ಇರುತ್ತಾರೆ.
     ರಮಾಮಣಿ ಯೋಗ ಕೇಂದ್ರಕ್ಕೆ ನೀವು ಕಾಲಿಡುತ್ತಿದ್ದಂತೆಯೇ ಗುರೂಜಿಯವರ ಅನೇಕ ಯೋಗಾಸನಗಳ ಭಂಗಿಯ ಮೂರ್ತಿಯನ್ನು ಕಾಣುತ್ತೀರಿ. ಒಳಗೆ ಹೋದಂತೆ ಅವರಿಗೆ ಸಿಕ್ಕಿದ ಸಾವಿರಾರು ಪ್ರಶಸ್ತಿ ಪತ್ರಗಳನ್ನು ಗೋಡೆಯ ಮೇಲೆ ಕಾಣಬಹುದು. ಯೋಗದ ಕ್ಲಾಸಿಗೆಂದು ಇರುವ ಹಾಲ್ ಗಳಲ್ಲಿ ಗುರೂಜಿಯವರ ಎಲ್ಲ ಯೋಗ ಭಂಗಿಗಳ ಚಿತ್ರಪಟಗಳು ಇವೆ. ನಿಮಗೆ ಬೇಕಾದ ಯೋಗಸಂಬಂಧ ಪುಸ್ತಕಗಳನ್ನೂ ಇಲ್ಲಿ ಕೊಂಡು ಓದಬಹುದು. ಯೋಗಾರ್ಥಿಗಳಲ್ಲಿ ಇತರೆ ದೇಶದವರೇ ಹೆಚ್ಚು.  
 
ವರ್ಷದಲ್ಲಿ 5 ಸಲ ಅವರು ಯೋಗದ ಬಗ್ಗೆ ಮಕ್ಕಳಿಗೆ ತಮ್ಮ ಅನಿಸಿಕೆಗಳನ್ನು ಹೇಳುತ್ತಾರೆ. ಅವರ ಮಾತಿನಲ್ಲಿ ಉತ್ತರಗಳಿಗಿಂತ ಪ್ರಶ್ನೆಗಳೇ ಜಾಸ್ತಿ. ಅದೇ ನಿಜವಾದ ಗುರುವಿನ ಲಕ್ಷಣವೆಂದೆನಿಸುತ್ತದೆ. ಯೋಗದ ವಿವಿಧ ಅಂಗಗಳು ಯಾವುವು, ಅವುಗಳನ್ನು ಶಿಸ್ತುಬದ್ಧವಾಗಿ ಹೇಗೆ ಅಭ್ಯಸಿಸಬೇಕು ಮುಂತಾದುವುಗಳ ಬಗ್ಗೆ ಅವರ ಮಾತಿನಲ್ಲಿಯೇ ನೀವು ಕೇಳಬೇಕು. ಅವರ ಎದುರಿಗೆ ನಿಂತರೆ ನಿಮಗಿರುವ  ಅನೇಕಾನೇಕ ಯೋಗದ ಮೇಲಿನ ಪ್ರಶ್ನೆಗಳು ಮತ್ತು ಅನುಮಾನಗಳು ಮಾಯವಾಗಿಬಿಡುತ್ತವೆ. ಮೊನ್ನೆ ಅವರು ಪತಂಜಲಿ ಯೋಗಸೂತ್ರಗಳ ಬಗ್ಗೆ ನೀಡಿದ 2ಗಂಟೆಗಳ ಭಾಷಣವನ್ನು ಕೇಳಿ ಯೋಗಕೇಂದ್ರದ ಮಕ್ಕಳೆಲ್ಲಾ ದಂಗಾಗಿ ಹೋಗಿದ್ದರು. ಒಂದು ವ್ಯಕ್ತಿ ಒಂದು ಜೀವಮಾನದ ಅವಧಿಯಲ್ಲಿ ಇಷ್ಟೆಲ್ಲ ಜ್ನಾನವನ್ನು ಗಳಿಸಲು ಸಾಧ್ಯವೇ ಎಂದು.  

ಗುರೂಜಿಯವರ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ಯೋಗದ ಹೆಸರಿನಲ್ಲಿ ದುಡ್ಡು ಮಾಡುವ ದಂಧೆಗೆ ಇಳಿದಿರುವ ಇಂದಿನ ಕಾಲದಲ್ಲಿ ಇಂಥಹ ಮಹಾನ್ ಗುರುಗಳು ಪ್ರಂಪಂಚದಲ್ಲಿ ಸಿಗುವದೇ ವಿರಳ..
ಇಂಥಹ ಯೋಗಾಚಾರ್ಯರನ್ನು ನೋಡುವ ಅವರ ಯೋಗಕೇಂದ್ರದಲ್ಲಿ ಕಲಿಯುವ ಅವಕಾಶ ಸಿಕ್ಕಿದ್ದು ನನ್ನ ಜೀವನದ ಮಹಾನ್ ಭಾಗ್ಯದ ವಿಚಾರ.

Places to visit near Sirsi and Yellapur, Karnataka

Tourist Places Near Yellapura, Karnataka :

1) Satoddi Falls & Kodasalli Dam backwaters : 25km from Yellapur

 http://www.dreamroutes.org/western/satoddifalls.html
 Ultimate place !!! You have to take a private taxi from yellapur.







2) Magod Falls & Jenakallu gudda Sunset view Point: 17km from Yellapur

http://www.dreamroutes.org/western/magodfalls.html










3) KaveDeekere Lake: 5km from Yellapur.

On the way to magod falls.Its a wonderfull huge lake. Dont miss it.
   








Banana County (http://www.bananacountyresort.com)


Tourist Places Near Sirsi, Karnataka :

1) Shivagange Falls: 45km from Sirsi.

http://www.karnatakaholidays.com/shivaganga-falls.php 









2) Unchalli Falls: 30km from Sirsi.
  
http://www.dreamroutes.org/western/unchallifalls.html
 









3) Yana: 45km from Sirsi.


 http://www.dreamroutes.org/western/yana.html  
 















4) BuruDe Falls : 55km from Sirsi(via Siddapur).

http://www.dreamroutes.org/western/burudefalls.html
 









5) Marikamba Temple sirsi:
6) Sahasralinga.: 17km from Sirsi.(on the way to Yellapur)
      http://www.dreamroutes.org/western/sahasralinga.html     


More details in Sirsi Travel guide:
Visitsirsi.com  
http://karnatakatourism.org/Natural_Cascading_magodfalls_sleep.htm

ಮತ್ತೆ ಮತ್ತೇಕೆ ಓಡಿ ಬರುವೆ ನಾ

ಮತ್ತೆ ಮತ್ತೇಕೆ ಓಡಿ ಬರುವೆ ನಾ
ನಿನ್ನಾ ಮಡಿಲಿಗೆ,

ಮರೆತಿದ್ದೆ ನಿನ್ನಾ ತಣ್ಣೀರಿನ
ಪ್ರೀತಿಯ ಸ್ಪರ್ಶ,
ಅದೆಲ್ಲಿ ಕಳೆದಿದ್ದೆ ನಿನ್ನಲ್ಲಾಡಿದ
ಉಸಿರಿನ ಪುಳಕ,
ಕಳೆದಿದ್ದೆ ನೀಲಾಬಾನಿನ
ತಂಪನೆಯ ನೋಟ,
ಮರೆತಿದ್ದೆ ದಟ್ಟಾರಣ್ಯದ
ಹಕ್ಕಿಗಳ ಚಿಲಿಪಿಲಿ ನಾದ,

ಕಾಣದ ದಾರಿಗೆ,
ಗುರಿಯಿರದ ಬದುಕಿಗೆ,
ಹುಚ್ಚು ಓಟದ ಮನಕೆ,
ಜೀವ ನೀಡಲು ಕೈ
ಎಳೆದು ಕರೆಯುವೆ ನೀ,

ಮತ್ತೆ ಮತ್ತೇಕೆ ಓಡಿ ಬರುವೆ ನಾ
ಓ ಹಿಮಾಲಯವೇ ನಿನ್ನಾ ಮಡಿಲಿಗೆ,
ತಬ್ಬಲಿಯ ಮಗುವಿನಂತೆ...

ಒಳಪ್ಯಾಡ್ಲ ಸೈಕಲ್ಲು

ಮಲೆನಾಡಿನ ಮಕ್ಕಳ ಸೈಕಲ್ ನ ಕಥೆಗಳು ಯಾವತ್ತೂ ರೋಚಕ. (ಈಗ ನೇರವಾಗಿ ಬೈಕು ಏರುತ್ತಾರೆ ಬಿಡಿ...) ಇದು ಸುಮಾರು 1990 ರ ನಂತರದ ಕಥೆ.ನಮ್ಮ ಊರುಗಳಲ್ಲಿ ಎಲ್ಲರ ಮನೆಗಳಲ್ಲೂ ಸಾಮಾನ್ಯವಾಗಿ ಇರುತ್ತಿದ್ದ 24 ಇಂಚಿನ ಹೀರೋ ಸೈಕಲ್ಲನ್ನು ಯಶಸ್ವಿಯಾಗಿ ಓಡಿಸುವದು ಮಕ್ಕಳಿಗೆಲ್ಲಾ ಒಂದು ಪ್ರತಿಷ್ಠೆಯ ಮಾತಾಗಿತ್ತು. ಸಾಮಾನ್ಯವಾಗಿ ಒಂದನೆಯ ಕ್ಲಾಸಿನ ಮಕ್ಕಳಿಂದ ಏಳನೆಯತ್ತೆವರೆಗಿನ ಮಕ್ಕಳಿಗೂ ಅಷ್ಟು ದೊಡ್ಡ ಸೈಕಲ್ಲ ಸೀಟಿನ ಮೇಲೇರಿ ಸವಾರಿ ಮಾಡುವುದು ಸಾಧ್ಯವಿರಲಿಲ್ಲ. ಹಾಗೇನಾದರೂ ಸೊಕ್ಕುಮಾಡಿ ಹತ್ತಿದರೆ ಸ್ವಲ್ಪ ದೂರ ಹೋಗುವಷ್ಟರಲ್ಲಿ ಬಿದ್ದು ನೆಲದ ಪಾಲಾಗುತ್ತಿದ್ದುದು ಹೊಸ ವಿಷಯವಾಗಿರಲಿಲ್ಲ.

ಆದ್ದರಿಂದ ಮಕ್ಕಳೆಲ್ಲ ತಮ್ಮ ಎರಡು ಪಟ್ಟು ದೊಡ್ಡದಿರುವ ಸೈಕಲ್ಲನ್ನು ಮಣಿಸಿ ಓಡಿಸಲು "ಒಳಪ್ಯಾಡ್ಲು" ಎಂಬ ನೂತನ ವಿಧಾನವನ್ನು ಬಳಸುತ್ತಾರೆ. ಬಹುಷ: ಸೈಕಲ್ಲು ಕಂಡುಹಿಡಿದವನಿಗೂ ಈ ಥರಹ ಸೈಕಲ್ಲನ್ನು ಓಡಿಸಬಹುದು ಎಂದು ಅನಿಸಿರಲಿಕ್ಕಿಲ್ಲ.!!! ಒಂದು ಕಾಲನ್ನು ಎಡಕಿನ ಪೆಡಲ್ಲಿನ ಮೇಲಿಟ್ಟು, ದಂಡಿಗೆಯ ಒಳಗಿಂದ ಕಾಲನ್ನು ಒಳತೂರಿ ಆಚೆಯ ಪ್ಯಾಡ್ಲ ಮೇಲಿಟ್ಟು ತುಳಿಯುತ್ತಾ, ಎಡಕಿನ ಕೈಯಿಂದ ಸೈಕಲ್ಲಿನ ದಿಕ್ಕನ್ನು ನಿಭಾಯಿಸುತ್ತಾ, ಬಲಕೈಯನ್ನು ಸೀಟಿನ ಮೇಲಿಟ್ಟು ಬ್ಯಾಲೆನ್ಸ್ ಮಾಡುವ ರೀತಿ ಅತ್ಯದ್ಭುತ.. ದುರದೃಷ್ಟವಶಾತ್ ನನ್ನಲ್ಲಿ ಅದರ ಫೋಟೋಗಳಿಲ್ಲ...

ಸಾಮಾನ್ಯವಾಗಿ ಮಕ್ಕಳು ಸೈಕಲ್ಲು ಕಲಿಯುತ್ತಾ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಾರೆ ಎಂದು, ನಮಗೆಲ್ಲಾ ಸೈಕಲ್ಲು ಸವಾರಿ ನಿಷಿದ್ಧವಾಗಿತ್ತು. ಆದರೂ ಮಧ್ಯಾಹ್ನ ಊಟವಾದ ನಂತರ ಮಲಗಿ ಗೊರಕೆ ಹೊಡೆಯುತ್ತಿದ್ದ ನಮ್ಮ ಹಿರಿಯರ ಕಣ್ಣು ತಪ್ಪಿಸಿ ಮೇಲಿನಮನೆ ಶ್ರೀಕಾಂತ ಹಾಗೂ ನಾನು ಕದ್ದು ಸೈಕಲ್ಲನ್ನು ಒಳಪ್ಯಾಡ್ಲಿನಲ್ಲಿ ಓಡಿಸಲು ಹರಸಾಹಸಪಡುತ್ತಿದ್ದೆವು. ಆದರೆ ಪ್ರತೀಸಲವೂ ನಾವು ನಾಕುದಾರಿ ಎಂಬ ಜಾಗದಲ್ಲಿದ್ದ ಸ್ವಲ್ಪ ದೂರದ ಮರಳಿನ ರಸ್ತೆಯನ್ನು ದಾಟಿಯೇ ಹೋಗಬೇಕಾಗಿತ್ತು. ಮರಳಿದ್ದಲ್ಲಿ ಸೈಕಲ್ಲಿನವರು ಉದುರಿ ಬೀಳುವದು ಸಾಮಾನ್ಯ :) ನಾವಂತೂ ಎಷ್ಟು ಸಲ ಬಿದ್ದೆವೋ ಗೊತ್ತಿಲ್ಲ. ಆದರೆ ಸೈಕಲ್ಲಿನ ಮೇಲಿಂದ ಬಿದ್ದೆವೆಂದು ಹೇಳಿದರೆ ಬೈಗುಳ ಗ್ಯಾರಂಟಿ. ಅದಕ್ಕೇ ಯಾರಲ್ಲೂ ಈ ಮಾತನ್ನು ಹೇಳುವಂತಿರಲಿಲ್ಲ.

ಆ ಮರಳಿನ ದಾರಿಯಲ್ಲಿ ಹಲವಾರು ಸಲ ಒಳಪ್ಯಾಡ್ಲ್ ಸೈಕಲ್ಲ ಮೇಲಿಂದ ಬಿದ್ದ ಮೇಲೆ, ನಾನು ಶ್ರೀಕಾಂತ ಇಬ್ಬರೂ ಒಂದು ಅಭಿಪ್ರಾಯಕ್ಕೆ ಬಂದೆವು. "ನಮ್ಮೂರಿನ ಪ್ರತಿಯೊಬ್ಬ ಸೈಕಲ್ಲ್ ಹೊಡಿಯುವವನೂ ನಾಕು ದಾರಿಯ ಮರಳಿನ ಜಾಗದಲ್ಲಿ ಒಂದು ಸಲವಾದರೂ ಬಿದ್ದೇ ನಂತರ ಎದ್ದು ಮುಂದೆ ಹೋಗುತ್ತಾನೆ" ಎಂದು !!! ಆದ್ದರಿಂದ ನಾವು ಸೈಕಲ್ಲು ಹೊಡಿಯುವಾಗ ನಾಕುದಾರಿ ಬಂದೊಡನೆ ತನ್ನಿಂತಾನೇ ಸೈಕಲ್ಲಿನ ಕೂಡೆ ಬಿದ್ದುಬಿಡುವ ಆಚರಣೆಯನ್ನು ಮಾಡಿಕೊಂಡೆವು ...ಒಂದು ದಿನ ನನ್ನ ಅಣ್ಣ ನನ್ನನ್ನು ಆತನ ಸೈಕಲ್ಲ ಮೇಲೆ ಕೂಡ್ರಿಸಿಕೊಂಡು ನಾಕುದಾರಿಯಲ್ಲಿ ಹೋದ. ನಾನು ನಿರೀಕ್ಷಿಸಿದಂತೆ ಅವನು ಬೀಳಲೇ ಇಲ್ಲ..ನಾನು ಆಶ್ಚರ್ಯಚಕಿತನಾಗಿ ಕೇಳಿದೆ, "ಏನಣ್ಣಾ ನೀನು ಜೋರಿದ್ದೆ, ನಾಕುದಾರಿಯಲ್ಲಿ ಬೀಳಲೇ ಇಲ್ಲ....?" ...!!!

ಒಳಪ್ಯಾಡ್ಲಿನ ಸೈಕಲ್ಲ ಮೇಲೆ ರೇಸು ಮಾಡಿ ಬಿದ್ದು ಮನೆಗೆ ಬಂದಿದ್ದು ನೆನಪಿಗೆ ಬಂತು..ಹಾಗೇ ಈ ಬರಹ...

ಅಜ್ಜನ ನೆನಪಿನಲ್ಲಿ - ಕೊಳಲು ನಾದದ ಒಂದು ಸಂಜೆ.

೨೦೧೧ ಮೇ 7 ಕ್ಕೆ ನನ್ನ ಅಜ್ಜ ’ಸುಬ್ರಾಯ ಗಣಪಯ್ಯ ಮಳಲಗಾಂವ’ ಇವರ ಸ್ಮರಣಾರ್ಥ ಒಂದು ಬಾನ್ಸುರಿ ಜುಗಲ್ಬಂದಿ ಕಾರ್ಯಕ್ರಮವನ್ನು, ಕವಡೀಕೆರೆ ದೇವಸ್ಥಾನದ ಆವರದಲ್ಲಿ ಆಯೋಜಿಸಿದ್ದೆವು.

ಕವಡೀಕೆರೆ ಒಂದು ಅದ್ಭುತವಾದ ಪಾರಿಸರಿಕ ಸೌಂದರ್ಯದ ಸ್ಥಳ. ಪಕ್ಕದಲ್ಲಿ ವಿಶಾಲವಾದ ಕೆರೆ, ಇನ್ನೊಂದೆಡೆ ಅಡಿಕೆಯ ತೋಟ, ಇತ್ಯಾದಿ. ಅದಕ್ಕೆ ಎಲ್ಲರಿಗೂ ಸುಂದರ ಪರಿಸರದ ಮಡಿಲಲ್ಲಿ ಸಕ್ಕರೆಯ ಪಾನಕದಂಥಾ ಕೊಳಲಿನ ನಾದದ ಜುಗಲ್ಬಂದಿಯನ್ನು ಕೇಳುವ ಸದವಕಾಶ ಸೃಷ್ಟಿಯಾಗಿತ್ತು.


ಸಮೀರ್ ರಾವ್ - ಭುವನೇಶ್ವರ ಹಾಗೂ ಕಿರಣ ಹೆಗಡೆ ಮುಂಬೈ ಇವರೀರ್ವರ ಬಾನ್ಸುರಿಯ ನಾದಕ್ಕೆ ಗುರುಮೂರ್ತಿ ವೈದ್ಯ ಅವರ ತಬಲಾ ಸಾಥ್ ನೀಡಿದರು. ಹಿತ್ಲಳ್ಳಿಯ ಸಂತೂರ್ ಸುಮಾ ತಂಬೂರಿ ಸಹಕಾರ ನೀಡಿದರು. ಭೂಪಾಲಿಯೊಂದಿಗೆ ಶುರುವಾದ ಕೊಳಲಿನ ದನಿ, ಜೋಗ್ ರಾಗ, ಪಿಲೂ, ಹಾಗೂ ರಾಮಭಜನೆ, ಆರತಿ ಭಜನೆಗಳೊಂದಿಗೆ ಮುಕ್ತಾಯವಾಯಿತು. 500ಕ್ಕೂ ಮಿಗಿಲಾಗಿ ಸೇರಿದ್ದ ಜನರು ಕಾರ್ಯಕ್ರಮದ ಕೊನೆಯವರೆಗೂ ಆಲಿಸಿದರು. ಕರ್ಣಾನಂದಕರವಾಗಿದ್ದ ಸಂಗೀತ ಜನರನ್ನು ಮಂತ್ರಮುಗ್ಧರನ್ನಾಗಿಸಿತ್ತು.

ಕಾರ್ಯಕ್ರಮವನ್ನು ಇಷ್ಟು ದೂರದ ಊರಿನಲ್ಲಿ ಕುಳಿತು ಆಯೋಜಿಸುವದು ಸುಲಭವಲ್ಲ. ಇದಕ್ಕೆಲ್ಲಾ ನನ್ನ ಮಿತ್ರವ್ರುಂದದ ಅಪಾರ ಸ್ನೇಹ, ನಂಬಿಕೆ, ಪ್ರೋತ್ಸಾಹ ಇತ್ಯಾದಿಗಳೇ ಕಾರಣ ಎನ್ನಬಹುದು. ಕಲಾವಿದರುಗಳಾದ ಸಮೀರ ರಾವ್,ಕಿರಣ ಹೆಗ್ಡೆ, ಗುರುಮೂರ್ತಿ ವೈದ್ಯ, ಮುಂಡಗೋಡಿಮನೆ ಶ್ರೀಪತಿ ಭಟ್, ಈಶ್ವರ್ ಭಟ್, ಗುರ್ತೆಗದ್ದೆ ಸುಬ್ರಹ್ಮಣ್ಯ ಭಟ್, ಲಕ್ಷ್ಮೀನಾರಾಯಣ ಭಟ್ ಇವರೆಲ್ಲರುಗಳ ಪ್ರೀತಿಯನ್ನು ಹಾಗೂ ಪ್ರೋತ್ಸಾಹಗಳನ್ನು ನಾನೆಂದೂ ಮರೆಯಲಾರೆ.

ನಮ್ಮೆಲ್ಲರ ಗುರಿ ಸದಾ ಪಕ್ಕದ ಮನೆಯವರ ಜೊತೆ ಜಗಳ, ಕೋರ್ಟ್ ಕೇಸು, ಕೊಳಕು ರಾಜಕೀಯ, ಸಂಶಯ, ಡಂಭಾಚಾರದ ವಿಚಿತ್ರ ಧಾರ್ಮಿಕ ಸಂಪ್ರದಾಯಗಳಲ್ಲಿ ಸದಾ ಮುಳುಗಿ, ತಮ್ಮ ಜೀವನವನ್ನು ಕಳೆಯುತ್ತಿರುವ ನಮ್ಮ ಊರಿನ ಜನರಿಗೆ ತಮ್ಮ ಸುತ್ತಲಿನ ಅದ್ಭುತ ನೈಸರ್ಗಿಕ ಸೌಂದರ್ಯದ ಅನುಭೂತಿಯನ್ನು ಸ್ವಲ್ಪವಾದರೂ ಉಣಬಡಿಸುವದಷ್ಟೇ ಆಗಿತ್ತು.

Audio Recording of this concert is here http://www.esnips.com/web/Sameer-Kiran-jugalbandi

ಅಮವಾಸ್ಯೆಯ ಬೆಂಕಿ ಸೂಡಿ ಹಾಗೂ ರಂಗನ ಪರದಾಟ.

ನಮ್ಮ ದೊಡ್ಡಣ್ಣನಾದ ಸುಬ್ಬಣ್ಣನ ಮದುವೆಗೆಂದು ಮೈಸೂರಿನಿಂದ ಸಹಪಾಠಿಗಳಾದ ಕಾರ್ತಿಕ್, ರಂಗ, ಕಾವಾ, ಅಜಿತ್ ಇವರು ಮಳಲಗಾಂವ್ ಗೆ ಬಂದಾಗಿನ ಕಥೆ.

ಮಲೆನಾಡ ನೋಡಬೇಕು, ಅಲ್ಲಿನ ಸೌಂದರ್ಯವನ್ನು ಸವಿಯಬೇಕೆಂಬ ಆಸೆ ಅವರದು. ಅದರಂತೇ ಗಾಂವ್ಕಾರ ಭಾವನ ಜೀಪಿನಲ್ಲಿ ಸಾತೊಡ್ಡಿ, ಮಾಗೋಡು ಜಲಪಾತಗಳನ್ನು ಸುತ್ತಿದ್ದೂ ಆಯಿತು. ಮದುವೆ ಹಿಂದಿನ ದಿನ ರಾತ್ರಿ 10 ಗಂಟೆ ಆಗಿರಬಹುದು. "ಮಗಾ ಇಲ್ಲೇ ಒಂದು ಕಿಲೋಮೀಟರ್ ನಡೆದು ಡಾಂಬರ್ ರಸ್ತೆಯ ಬಳಿಗೆ ಒಂದು ವಾಕ್ ಹೋಗಿ ಬರೋಣ್ವಾ? ಅಲ್ಲಿ ಪರ್ಸು ಅಂತ ನಮ್ಮ ಕೆಲಸದವನ ಬಿಡಾರ ಇದೆ. ಅವನು ಸೈಕಲ್ ಟೈರ್ ನ ಪಂಜು (ಸೂಡಿ) ಮಾಡಿಕೊಡುತ್ತಾನೆ. ಅದನ್ನು ಹಿಡಿದುಕೊಂಡು ಅದರ ಬೆಳಕಿನಲ್ಲೇ ತಿರುಗಿ ನಡೆದು ಬರೋಣ" ಎಂದು ಎಲ್ಲರನ್ನೂ ಕೇಳಿದೆ. ಮನೆಯಲ್ಲಿ ಎಲ್ಲರೂ ನನ್ನ ಯೋಜನೆಯನ್ನು ಕಿತ್ತುಹಾಕಿ, "ನಿಂಗೆ ಬ್ಯಾರೆ ಕೆಲ್ಸ ಇಲ್ಲೆ, ಸುಮ್ನೆ ಮನ್ಕ್ಯಳಿ" ಎಂದು ಬಯ್ದೇಬಿಟ್ಟರು. ಯಾಕೆಂದರೆ ಅದೊಂದು ವಿಚಿತ್ರವಾದ ಪ್ರಶ್ನೆಯಾಗಿತ್ತು.!!!

ನಮ್ಮೂರಿನ ಬಸ್ಟಾಪಿನಿಂದ 1ಕಿಮಿ ದಟ್ಟವಾದ ಕಪ್ಪು ಕಾಡಿನಲ್ಲಿ ನಡೆದು ಹೋದರೆ ನಮ್ಮ ಮನೆ ಸಿಗುತ್ತದೆ. ಆ ಕಾಡಿನ ಹಾದಿಯಲ್ಲಿ ನಡೆದು ಹೊರಟರೆ ಖಾಯಂ ತಿರುಗುವ ಜನರಿಗೂ ಕೆಲವೊಮ್ಮೆ ಭಯ ಕಾಡುತ್ತದೆ. ಹತ್ತಿರದಲ್ಲೇ ಕೆಲವೊಮ್ಮೆ ಗುರ್-ಗುಡುವ ಹುಲಿ, ಅಕಾಸ್ಮಾತ್ರ್ ಬೆಂಬತ್ತಿ ಓಡಿಸಿಕೊಂಡು ಬರುವ ಕರಡಿಗಳು, ಕಾಡೆಮ್ಮೆಗಳ ಓಡಾಟ ಇತ್ಯಾದಿ. ಸುಮ್ಮನೇ ಒಂದು ಕಾಡುಕೋಳಿ ಚರಪರ ಸದ್ದು ಮಾಡಿದರೂ ಅಂಜಿಕೆ. ದೂರದಲ್ಲಿ ಮೇಯುತ್ತಿರುವ ದನವನ್ನೇ ಹುಲಿ ಎಂದು ಗ್ರಹಿಸಿ ಓಟಕಿತ್ತಿದ್ದು ತುಂಬಾ ಸಲ ಇದೆ. ಮನೆಗೆ ಬಂದು ಮುಟ್ಟುವವರೆಗೂ ಕಂಡೂ ಕಾಣದ ಭಯ ನಮ್ಮ ಹೆಗಲ ಮೇಲಿರುತ್ತದೆ. ಇಂಥಾ ದಾರಿಯಲ್ಲಿ ಅಮಾವಾಸ್ಯೆಯ ರಾತ್ರಿಯಲ್ಲಿ ’ವಾಕ್’ ಹೋಗುವದರ ಬಗ್ಗೆ ಊಹಿಸಿಕೊಳ್ಳಿ.!!!

ಸದಾ ಹುಮ್ಮಸ್ಸಿನಲ್ಲಿರುವ ಕಾರ್ತಿಕ್ ಕೂಡಲೇ ಇದಕ್ಕೆ ಒಪ್ಪಿದ. ರಂಗನನ್ನು ಒಪ್ಪಿಸಲು ಹರಸಾಹಸಪಟ್ಟೆವು. ಆದರೆ ರಂಗ ಹೊರಡುವ ಮೊದಲೇ ಇವರಿಬ್ಬರೂ ತಮ್ಮ ಹುಚ್ಚಾಟಗಳಿಂದ ತನ್ನ ಪ್ರಾಣಕ್ಕೇ ಸಂಚಕಾರ ತರುತ್ತಾರೆ ಎಂದು ಅವಲತ್ತುಕೊಳ್ಳುತ್ತಾ ಹೊರಟ. ಕಾವಾ ಮತ್ತು ಅಜಿತ್ ಸುಖನಿದ್ರೆಗೆ ಜಾರಿದ್ದರು. ಕೈನಲ್ಲಿ ಒಂದು ಕರೆಂಟು ಬ್ಯಾಟ್ರಿ ಹಿಡಿದು ಮೂರೂ ಜನ ಕಡುಕಪ್ಪಿನಲ್ಲಿ ಎಡವುತ್ತಾ ನಡೆದು ಹೊರಟೆವು. ನಾನು ಕಾರ್ತಿಕ್ ಗೆ ಮಳಲಗಾಂವ್ ನ ಪ್ರಾಣಿಗಳ ಕಥೆಗಳನ್ನು ಹೇಳತೊಡಗಿದೆ. ’ನಮ್ಮ ದೂರದ ಸಂಬಂಧಿಕರೊಬ್ಬರನ್ನು ಹುಲಿ ಕೊಂದ ಕಥೆ, ಅಚ್ಚೇಕೇರಿ ಗೋಪಣ್ಣನನ್ನು ಹಂದಿ ಓಡಿಸಿಕೊಂಡು ಬಂದ ಕಥೆ, ಕುಟ್ಟಪ್ಪನ ಸೈಕಲ್ ಅನ್ನು ಕರಡಿ ಓಡಿಸಿಕೊಂಡು ಹೋದ ಕಥೆ...’ ಇತ್ಯಾದಿ. ರಂಗ ಮಾತ್ರ ತನ್ನ ರಂಗಿನಾಟಗಳನ್ನೆಲ್ಲಾ ಬಂದುಮಾಡಿ ಗುಮ್ಮನಂತೆ ನಾನು ಹೇಳುತ್ತಿದ್ದ ಕಥೆಗಳನ್ನೇ ಕೇಳುತ್ತಾ ಒಳಗೊಳಗೇ ಅಳುಕತೊಡಗಿದ.

ಕತ್ತಲಲ್ಲಿ ಕಗ್ಗಾಡಿನಲ್ಲಿ ನಡೆಯುತ್ತಿದ್ದರೆ ಕಿವಿ ಎಷ್ಟೇ ಹಿರಿದು ಮಾಡಿದರೂ ಎನೇನೂ ಕೇಳಿಸದ ನಿಶ್ಯಬ್ಧತೆ, ನಗರದ ಜೀವನದಲ್ಲಿ ಎಂದೆಂದೂ ಕಂಡಿರದ ದಟ್ಟ ಕಾಡಿನ ಕತ್ತಲು, ಕೂಗಿದರೂ ಯಾರೂ ನಮ್ಮ ಸಹಾಯಕ್ಕಿಲ್ಲ ಎಂಬ ಅಸಹಾಯಕತೆ.... ಇವೆಲ್ಲಾ ಭಯವನ್ನು ಮೂರ್ಪಟ್ಟು ಮಾಡಿಬಿಡುತ್ತವೆ. ಆಗ ಎಲ್ಲಾದರೂ ಒಂದೇ ಒಂದು ಸಣ್ಣ ಸದ್ದಾದರೂ ಸಾಕು, ಮೈಮೇಲಿನ ರೋಮಗಳು ಎದ್ದು ನಿಲ್ಲುತ್ತವೆ. ಅಂಥಾ ಕ್ಷಣಗಳು, ಈ ಭೂಮಿಯ ಮೇಲೆ ನಮಗಂಟಿಕೊಂಡಿರುವ ಜಾತಿ, ಭಾಷೆ, ಡಿಗ್ರಿಗಳು, ಸಂಬಂಧಗಳು, ಬ್ಯಾಂಕಿನಲ್ಲಿರುವ ಹಣ... ಇವೆಲ್ಲವುಗಳನ್ನು ಮರೆಸಿ, ನಾವೂ ಎಲ್ಲಾ ಪ್ರಾಣಿಗಳಂತೆಯೇ ಒಂದು ಪ್ರಾಣಿಯ ವರ್ಗ ಎಂಬುದನ್ನು ನೆನಪಿಸಿಕೊಡುತ್ತವೆ.

ಅವರಿಬ್ಬರೂ ಮೈಸೂರಿನಲ್ಲೇ ಹುಟ್ಟಿ ಬೆಳೆದವರು. ಅದೂ ರಂಗನಿಗೆ ಕಾಡಿನ ಪರಿಚಯ ಕಡಿಮೆ. ಅದರಲ್ಲೂ ಒಮ್ಮೆಲೇ ಅಂಥಾ ಕಾಡಿನಲ್ಲಿ ರಾತ್ರಿ ಓಡಾಟ ರಂಗನಿಗೆ ಸಹಜವಾಗಿ ನಡುಕ ಹುಟ್ಟಿಸಿತು. "ನಾನು ಸಾಯ್ಬೇಕು ಅಂತಿದ್ರೆ ಮೈಸೂರಲ್ಲೇ ಸಾಯುತ್ತಿದ್ದೆ. ಅಂತೂ ನಂಗೆ ಸತೀಶನ ಊರಲ್ಲೇ ಸಾಯ್ಬೇಕು ಅಂತಾ ಹಣೆಬರಹ ಇದೆ ಅನ್ಸತ್ತೆ. ಈ ಕತ್ತಲಲ್ಲಿ ಯಾವುದಾದ್ರು ಪ್ರಾಣಿ ಬಂದು ನನ್ನ ತಿಂದುಬಿಟ್ಟರೆ...ಮಕ್ಳಾ ಜಿಮ್ ಕಾರ್ಬೆಟ್ ಕಥೆ ಎಲ್ಲಾ ಹೇಳ್ಬೇಡ್ರೋ.. ಇಂದು ನನ್ನ ಹುಲಿ ತಿಂದುಬಿಟ್ರೆ ನನ್ ಬಾಡಿನ ಮೈಸೂರ್ ಗೆ ತಗೊಂಡು ಹೋಗ್ರೋ...", ಹೀಗೇ ತನ್ನ ಪ್ರಾಣ ಯಾವ ಯಾವ ರೀತಿ ಹೋಗಬಹುದೆಂದು ಕಲ್ಪಿಸುತ್ತಾ ಗಡಗಡಿಸತೊಡಗಿದ !!... ಗಡಗಡನೆ ನಡುಗುತ್ತಾ, ಬೆವರುತ್ತಿದ್ದ ರಂಗನಿಗೆ ನರಭಕ್ಷಕ ಹುಲಿಗಳ ಕಥೆಗಳನ್ನು ಇನ್ನಷ್ಟು ಹೇಳಿದೆವು. ನಾವು ಬಸ್ಟಾಪಿನ ಹತ್ತಿರದ ಪರ್ಸುವಿನ ಮನೆ ಮುಟ್ಟುವದರಲ್ಲಿ ರಂಗನ ಮಾತೇ ನಿಂತಿತ್ತು.

ಪರ್ಸುವಿನ ಮನೆಯಲ್ಲಿ ಸೈಕಲ್ ಟೈರ್ ನ ಬೆಂಕಿಯ ಪಂಜುಗಳನ್ನ ಮಾಡಿಸಿ, ಅದನ್ನೇ ಭೂತದ ಧಾರಾವಾಹಿಗಳಲ್ಲಿ ತೋರಿಸುವಂತೆ ಹಿಡಿದು ತಿರುಗಿ ಮನೆಯ ಕಡೆ ಹೊರಟರೆ, ರಂಗ "ಎಯ್ ಮಕ್ಳಾ ನಾನಂತೂ ಬರಲ್ಲಾ.. ಈಗ 11 ಗಂಟೆ ರಾತ್ರಿ ಆಯ್ತು.. ನಾನು ಇಲ್ಲೇ ಮಲ್ಕೋತೀನಿ" ಅಂತ ಹಠ ಹಿಡಿದ. ಅಂತೂ ಬೆಂಕಿ ಇರುವದರಿಂದ ಯಾವ ಪ್ರಾಣಿಯೂ ನಮ್ಮ ತಂಟೆಗೆ ಬರುವದಿಲ್ಲ ಎಂದು ಅವನ ಮನವೊಲಿಸಿ ಮನೆಗೆ ತಿರುಗಿ ಬಂದೆವು.

ರಂಗನಿಗೆ ಪ್ರಾಣ ಹೋಗಿ ಮತ್ತೊಮ್ಮೆ ಬಂದಂತಾಯಿತು!!!
ಆವತ್ತಿನ ರಾತ್ರಿಯ ಆ ’ವಾಕ್’ ಅನ್ನು ಕಾರ್ತಿಕ್, ರಂಗ ಹಾಗೂ ನಾನು ಎಂದಿಗೂ ಮರೆಯಲಸಾಧ್ಯ.